ಕೆಆರ್ಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರವಿಕೃಷ್ಣಾ ರೆಡ್ಡಿ ಕರೆ
ದಾವಣಗೆರೆ: ನೈತಿಕತೆ ಇಲ್ಲದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ (ಜೆಸಿಬಿ) ಪಕ್ಷಗಳನ್ನು ಧಿಕ್ಕರಿಸಿ ಕೆಆರ್ಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಕೆಆರ್ಎಸ್ ಪಕ್ಷವು ಇಲ್ಲಿನ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಮೂರು ಪಕ್ಷಗಳ ಶಾಸಕರುಗಳು ನೀಚ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಂಡ, ಹಣ, ಚಮಚಾಗಿರಿ, ಗುಲಾಮಗಿರಿಯೇ ಆ ಪಕ್ಷಗಳ ಬಂಡವಾಳವಾಗಿದೆ. ಶಾಸಕರಿಗೆ ಐಎಎಸ್ ಅಧಿಕಾರಿಗಳತ್ತ ಕೆಲಸ ಮಾಡಿಸುವುದಿರಲಿ, ತಾಲ್ಲೂಕಿನ ತಹಶೀಲ್ದಾರ್ ಜತೆಗೆ ಕಾನೂನು ಹೀಗಿದೆ ಎಂದು ಹೇಳುವ ಧೈರ್ಯವೂ ಇಲ್ಲವಾಗಿದೆ ಎಂದು ಟೀಕಿಸಿದರು.
ಈ ಪಕ್ಷಗಳಿಂದಾಗಿಯೇ ಯುವಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯರು ಯುವಜನರ ಭವಿಷ್ಯ ವಿನಾಶದತ್ತ ಸಾಗುತ್ತಿದೆ. 2050ರ ನಂತರ ಕೋಟಿ ಕೋಟಿ ಯುವಜನರು ಸಾಯುವ ಸನ್ನಿವೇಶ ನಿರ್ಮಾಣವಾಗಲಿದೆ. ಕೆಆರ್ಎಸ್ ಈ ಬಗ್ಗೆ ಎಚ್ಚರಿಸುವ ಪ್ರಯತ್ನ ಮಾಡುತ್ತಿದೆ. ಯುವಜನರು ಎಚ್ಚೆತ್ತುಕೊಳ್ಳದೇ ಇದ್ದರೆ ವಿನಾಶ ಖಂಡಿತ ರವಿಕೃಷ್ಣಾ ರೆಡ್ಡಿ ಎಚ್ಚರಿಸಿದರು.
ಕೆಆರ್ಎಸ್ ಮುಖಂಡರಾದ ಜ್ಞಾನಸಿಂಧು ಸ್ವಾಮಿ, ತೇಜಸ್ವಿ, ನಿರೂಪಾದಿ, ಜೀವನ್, ಜನನಿ ವತ್ಸಲಾ, ಚರಣ್ಕುಮಾರ್, ಲಿಂಗೇಗೌಡ ಮುಂತಾದವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಸುರೇಶ ಸಂಗಾಹಳ್ಳಿ, ಮುಖಂಡರಾದ ಜಿ.ಎಂ.ಮಂಜುನಾಥ, ಚಂದ್ರಶೇಖರ, ವೀರಭದ್ರಪ್ಪ, ಸೈಯದ್ ಸಮೀವುಲ್ಲಾ, ಕೃಷ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಅಭಿಷೇಕ್ ಸಹಿತ ಅನೇಕರಿದ್ದರು.
ಪ್ರಣಾಳಿಕೆ ಬಿಡುಗಡೆ: ಉನ್ನತ ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, 18 ವರ್ಷ ದಾಟಿದ ಎಲ್ಲರಿಗೂ ಉದ್ಯೋಗ, ನೌಕರಿಯಲ್ಲಿ ಗುತ್ತಿಗೆ ಪದ್ಧತಿ ಪದ್ಧತಿ ರದ್ದತಿ ಸೇರಿದಂತೆ ಯುವಜನರಿಗಾಗಿ ಅನೇಕ ಯೋಜನೆಗಳಿರುವ ಪ್ರಣಾಳಿಕೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ ಬಿಡುಗಡೆ ಮಾಡಿದೆ.
ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಪಾರದರ್ಶಕವಾಗಿ, ಭ್ರಷ್ಟಾಚಾರರಹಿತವಾಗಿ ನೇಮಕ ಮಾಡಲಾಗುವುದು. ಖಾಸಗಿ ವಲಯಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು. ಸ್ಥಳೀಯ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಮಾದಕ ವಸ್ತುಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು. ಚುನಾವಣೆಯಲ್ಲಿ ಸ್ಪರ್ಧಿಸಲು ಯುವಜನರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮವನ್ನು ಸ್ನಾತಕೋತ್ತರ ಪದವಿವರೆಗೆ ವಿಸ್ತರಣೆ, ಹೋಬಳಿಗೊಂದು ಕೌಶಲ ತರಬೇತಿ ಕೇಂದ್ರಸ್ಥಾಪನೆ, ಕೆಪಿಎಸ್ಸಿ ಅಕ್ರಮಕ್ಕೆ ಕಡಿವಾಣ, ಕೃಷಿ, ಹೈನುಗಾರಿಕೆಗೆ ಪ್ರೋತ್ಸಾಹ, ಹೋಬಳಿಗೊಂದು ಕ್ರೀಡಾ ತರಬೇತಿ ಅಕಾಡೆಮಿ ಸ್ಥಾಪನೆ ಸಹಿತ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.