ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಸ್ವಾಗತ: ಸಾಮಾಜಿಕ ಭದ್ರತೆ ಕ್ರಮ ಕಡೆಗಣನೆ – ಮಂಜುನಾಥ್ ಕೈದಾಳೆ
ದಾವಣಗೆರೆ: ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳು ಪ್ರಕಟಿಸಿರುವ ಬಜೆಟ್ ನಲ್ಲಿ ಸ್ಕೀಮ್ ಕಾರ್ಯಕರ್ತರಾದ ಆಶಾ ಅಂಗನವಾಡಿ ಬಿಸಿಯೂಟ ಇತ್ಯಾದಿ ನೌಕರರಿಗೆ ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಿರುವ ಕ್ರಮವನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್( ಎ ಐ ಯು ಟಿ ಯು ಸಿ) ದಾವಣಗೆರೆ ಜಿಲ್ಲಾ ಸಮಿತಿಯು ಸ್ವಾಗತಿಸುತ್ತದೆ. ಆದರೆ ಈ ಸ್ಕೀಮ್ ಕಾರ್ಯರ್ತೆಯರ ಕನಿಷ್ಠ ವೇತನವು ಸೇರಿದಂತೆ ಅರೋಗ್ಯ ಕ್ಷೇಮ ಅಭಿವೃದ್ಧಿ ಹಾಗೂ ಸಾಮಾಜಿಕ ಭದ್ರತೆ ಕ್ರಮಗಳನ್ನುಬಜೆಟ್ ಕಡೆಗಣಿಸಿದೆ ಅಲ್ಲದೆ ಸಮಸ್ತ ದುಡಿಯುವ ಜನರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿರುವ ಈ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ ಎಂದು ಅಭಿಪ್ರಾಯ ಪಡುತ್ತದೆ.
19 ಇಎಸ್ಐ ಚಿಕಿತ್ಸಾಲಯಗಳ ಅಭಿವೃದ್ಧಿ ಹಾಗೂ ಆರು ಹೊಸ ಇಎಸ್ಐ ಚಿಕಿತ್ಸಾಲಯ ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು, ಇನ್ನೊಂದೆಡೆ ಇಎಸ್ಐ ವೈದ್ಯಕೀಯ ಸೇವೆಗಳನ್ನು ಸೊಸೈಟಿಗೆ ಹಸ್ತಾಂತರ ಮಾಡುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದನ್ನು ಮುಚ್ಚಿಡುತ್ತಿರುವ ಸರ್ಕಾರದ ನಡೆ ಅಸಮರ್ಥನೀಯ. 20 ಲಕ್ಷ ಕಟ್ಟಡ ಕಾರ್ಮಿಕ ಫಲಾನುಭವಿಗಳಲ್ಲಿ ಕೇವಲ ಎರಡು ಲಕ್ಷ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ ಕೊಟ್ಟಿರುವ ಸರ್ಕಾರ, ಕಲ್ಯಾಣ ನಿಧಿಯಿಂದ ಕೊಟ್ಟಿರುವ ಈ ಸೌಲಭ್ಯವನ್ನು ತನ್ನದೆಂದು ಹೇಳಿಕೊಳ್ಳುತ್ತಿರುವುದು ಅತ್ಯಂತ ವಿಪರ್ಯಾಸ. ಅದೇ ರೀತಿ ಸಂಘಟಿತ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ಕ್ರಮವು ಸಹ ಮೂಗಿಗೆ ತುಪ್ಪ ಸವರಿದಂತಿದೆ.
ಸರ್ಕಾರಿ ವಲಯಗಳಲ್ಲಿ ದೀರ್ಘಕಾಲದಿಂದ ದುಡಿಯುತ್ತಿರುವ ಎರಡೂವರೆ ಲಕ್ಷಕ್ಕೂ ಮೀರಿದ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಜೀವನ್ ಯೋಗ್ಯ ವೇತನ ಕಲ್ಪಿಸಲು ಕಿಂಚಿತ್ತೂ ಯೋಚಿಸದಿರುವ ಸರ್ಕಾರದ ನಿಷ್ಕಾಳಜಿ ಎದ್ದು ಕಾಣುತ್ತಿದೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳ ಮಹಾಪೂರವನ್ನು ಹರಿಸಿರುವ ಲೆಕ್ಕಾಚಾರದ ಈ ಬಜೆಟ್ ಸಮಸ್ತ ಗುತ್ತಿಗೆ ಗೊರಗುತ್ತಿಗೆ ನೌಕರರು ದಿನಗೂಲಿ ನೌಕರರು ಹಾಗೂ ಸ್ಕೀಮ್ ಕಾರ್ಯಕರ್ತರ ನಿರೀಕ್ಷೆಯನ್ನು ತಲೆಕೆಳಗು ಮಾಡಿದೆ. ಆದ್ದರಿಂದ ಸಮಸ್ತ ದುಡಿಯುವ ಜನತೆ ತಮ್ಮ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಬಲಿಷ್ಠ ಐಕ್ಯ ಹೋರಾಟವನ್ನು ಕಟ್ಟುವುದು ಹೊರತು ಬೇರೇನೂ ಇಲ್ಲ ಎಂಬುದನ್ನು ಈ ಬಜೆಟ್ ಸಾಬೀತ್ಪಡಿಸುತ್ತದೆ ಎಂದು ಎ ಐ ಯು ಟಿ ಯು ಸಿ ಜಿಲ್ಲಾ ಸಮಿತಿ ಅಭಿಪ್ರಾಯ ಪಡುತ್ತದೆ.
ಮಂಜುನಾಥ್ ಕೈದಾಳೆ, ಜಿಲ್ಲಾ ಅದ್ಯಕ್ಷರು, AIUTUC.