KSRTC ಡಿಸಿ ತಪ್ಪು ನಿರ್ಧಾರ, ನಗರ ಸಂಚಾರಕ್ಕೀದ್ದ ಬಸ್ ಹೊರಟಿದ್ದು ಚಿತ್ರದುರ್ಗಕ್ಕೆ; 40 ಅಮಾಯಕ ಜೀವಗಳು ಪಾರು

ದಾವಣಗೆರೆ : KSRTC ನಗರದಲ್ಲಿ ಸಂಚಾರ ಮಾಡಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ಚಿತ್ರದುರ್ಗಕ್ಕೆ ಬಿಟ್ಟಿದ್ದು, ಮಾರ್ಗ ಮಧ್ಯೆ ಅಪಘಾತವಾಗಿದ್ದು, 40 ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ. ಈ ನಡುವೆ ಕೆಎಸ್‌ಆರ್‌ಟಿಸಿ ಡಿಸಿ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾರಿಗೆ ಇಲಾಖೆಯ ಬಸ್ ಬ್ರೇಕ್ ಫೇಲ್ ಆಗಿದ್ದ ಪರಿಣಾಮ ದಾವಣಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 04ರ ಹೆಬ್ಬಾಳ್ ಟೋಲ್ ಗೇಟ್ ಬಳಿ ಅಪಘಾತ ನಡೆದಿದೆ. ಈ ನಡುವೆ ಚಾಲಕನ ಸಮಯ ಪ್ರಜ್ಞೆಯಿಂದ 40 ಬಡ ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ.

ಈ ಬಸ್ ಚಿತ್ರದುರ್ಗದಿಂದ ದಾವಣಗೆರೆಯತ್ತ ಬರುತ್ತಿತ್ತು. ಹೀಗಿರುವಾಗ ಹೆಬ್ಬಾಳ್ ಟೋಲ್ ಗೇಟ್ ಬಳಿ ಇದ್ದಕ್ಕಿದ್ದಂತೆ ಬಸ್ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಚಾಲಕ ಬಸವರಾಜ್ ಪ್ರಯಾಣಿಕರ ಪ್ರಾಣ ಉಳಿಸಲು ಪ್ರಯತ್ನಿಸಿದರೂ ಬಸ್ ಮಾತ್ರ ನಿಯಂತ್ರಣಕ್ಕೆ ಸಿಕ್ಕಿಲ್ಲ. ಟೋಲ್ ಗೇಟ್ ಹಳಿ ಬರುತ್ತಿದ್ದಂತೆ ಮೊದಲು ಅಲ್ಲಿದ್ದ ಚರಂಡಿಯ ಮೇಲೆ ಹತ್ತಿಸಿ ಅದರ ವೇಗ ತಗ್ಗಿಸಿದ್ದಾರೆ. ನಿಯಂತ್ರಣಕ್ಕೆ ಬಂದ ಬಳಿಕ ಖಾಲಿ ಜಾಗದಲ್ಲಿ ಬಸ್ ನ್ನು ನಿಲ್ಲಿಸುವಲ್ಲಿ ಬಸವರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯವರೆಗೂ ಭಯದಲ್ಲಿದ್ದ 40 ಪ್ರಯಾಣಿಕರು, ಬಸ್ ಸುರಕ್ಷಿತವಾಗಿ ನಿಲ್ಲುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ತಮ್ಮ ಜೀವ ಉಳಿಸಿದ ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕ ಸೇರಿದಂತೆ ಕೆಲ ಪ್ರಯಾಣಿಕರಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದರು.

ಬಸ್ ನಂಬರ್ ಬೇರೆ , ಟಿಕೇಟ್‌ನಲ್ಲಿದ್ದ ನಂಬರ್ ಬೇರೆ : ಅಪಘಾತಕ್ಕೀಡಾಗಿದ್ದ ಬಸ್ ನಂಬರ್ ಬೇರೆಯಾಗಿದ್ದು, ಟಿಕೆಟ್‌ನಲ್ಲಿ ನೀಡಲಾದ ಬಸ್ ನಂಬರ್ ಬೇರೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದರ ಹಿಂದೆ ಏನು ಅವ್ಯವಹಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ ಬಾರದ ಕಾರಣ ಸಾಕಷ್ಟು ತೊಂದರೆಯಾಗಿದೆ. ಅಲ್ಲದೇ ಚನ್ನಗಿರಿ-ದಾವಣಗೆರೆ ಸಂಚರಿಸುವ ಬಸ್‌ನಲ್ಲಿ ಡೋರ್‌ಗಳೇ ಇಲ್ಲ. ಇನ್ನು ಚಿತ್ರದುರ್ಗಕ್ಕೆ ಇಂತಹ ಬಸ್‌ಗಳನ್ನು ಕಳಿಸಿದ್ದು, ಬ್ರೇಕ್ ಫೇಲ್ ಆಗಿದೆ.ಹಳೆಯ ಬಸ್‌ಗಳನ್ನು ಮತ್ತೆ ರಿಪೇರಿ ಮಾಡಿಸಿ ಅವುಗಳನ್ನು ಬಳಸುತ್ತಿದ್ದಾರೆ. ಸಾರ್ವಜನಿಕರ ಜೀವನಕ್ಕೆ ಬೆಲೆಯೇ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಡಿಸಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ನರ್ಮ್ NURM ಯೋಜನೆ ಬಸ್:

2017ರಲ್ಲಿ ನಗರ ಸಂಚಾರಕ್ಕಾಗಿ ನರ್ಮ್ ಯೋಜನೆಯಡಿ ಕೆಎಸ್‌ಆರ್‌ಟಿಸಿ ದಾವಣಗೆರೆ ಡಿವಿಜನ್‌ಗೆ ಬಸ್‌ಗಳನ್ನು ಮಂಜೂರು ಮಾಡಲಾಗಿತ್ತುಘಿ. ಈ ವಿಭಾಗದ ದಾವಣಗೆರೆ ಸೇರಿ ನಾಲ್ಕು ನಗರಗಳಲ್ಲಿ ಮೇ ಮೊದಲ ವಾರ ಈ ಬಸ್‌ಗಳು ರೋಡಿಗಿಳಿದಿದ್ದವು. ತದ ನಂತರ ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಿದ ನಂತರ, ಕೆಎಸ್‌ಆರ್‌ಟಿಸಿ ಬಸ್‌ಗಳು ಕಡಿಮೆಯಾದವು. ಇದಕ್ಕಾಗಿ ನಗರದಲ್ಲಿ ಸಂಚಾರ ಮಾಡಬೇಕಿದ್ದ ಬಸ್‌ಗಳನ್ನು ಬಳಸಿಕೊಳ್ಳಲಾಯಿತು. ಕೇಂದ್ರ ಸರಕಾರದ ನೆಹರು ನ್ಯಾಷನಲ್ ಅರ್ಬನ್ ರಿನಿವಲ್ ಮಿಷನ್ (ನರ್ಮ್)ನಡಿ ನಗರ ಸಂಚಾರ ವ್ಯವಸ್ಥೆಗೆ ಬಸ್ ನೀಡುವುದು ಯೋಜನೆ ಉದ್ದೇಶ. ಮೊದಲ ಹಂತದಲ್ಲಿ 60 ಬಸ್ ಒದಗಿಸಲಾಗಿತ್ತು. ಎರಡನೇ ಹಂತದಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಭದ್ರಾವತಿ ಸಿಟಿ ಸಂಚಾರಕ್ಕೆ ನೂರು ಬಸ್‌ಗಳನ್ನು ನೀಡಲಾಗಿತ್ತು. ಇವುಗಳಲ್ಲಿ ದಾವಣಗೆರೆ ನಗರಕ್ಕೆ 35 ಬಸ್‌ಗಳನ್ನು ನೀಡಲಾಗಿತ್ತುಘಿ. ಚಿತ್ರದುರ್ಗ 15, ಶಿವಮೊಗ್ಗ 30, ಭದ್ರಾವತಿ ನಗರಕ್ಕೆ 20 ಬಸ್‌ಗಳನ್ನು ನೀಡಲಾಗಿತ್ತು. ಇವುಗಳು ಲೈಲ್ಯಾಂಡ್ ವಿಎಸ್-4 ಮಾದರಿಯ ಮಿನಿ ಬಸ್ ಆಗಿದೆ. ಅಂದರೆ ತೀರಾ ಚಿಕ್ಕದೂ ಅಲ್ಲದ, ತೀರಾ ದೊಡ್ಡದೂ ಅಲ್ಲದ, ಮಧ್ಯಮ ಗಾತ್ರದ ಸುಮಾರು 35 ಸೀಟುಗಳ ಸಾಮರ್ಥ್ಯದ ಬಸ್‌ಗಳು ಇದಾಗಿದೆ… ಇನ್ನಾದರೂ ಕೆಎಸ್‌ಆರ್‌ಟಿಸಿ ಡಿಸಿ ಜನರ ಜೀವನದ ಜತೆ ಚೆಲ್ಲಾಟವಾಡದೆ ಉತ್ತಮ ಬಸ್‌ಗಳನ್ನು ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!